- ಬೆಂಗಳೂರು : ವಿಧಾನಸಭೆ ಚುನಾವಣೆಯ ಶಾಖದಿಂದ ಹೊರಬರುವ ಮುನ್ನವೇ ರಾಜ್ಯದ ಜನತೆ ವಿದ್ಯುತ್ ದರ ಏರಿಕೆಯ ‘ಶಾಕ್’ ಎದುರಿಸಲು ಸಿದ್ಧರಾಗಬೇಕಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರವನ್ನು ಪ್ರತಿ ಯುನಿಟ್ಗೆ 20ರಿಂದ 30 ಪೈಸೆಯಷ್ಟು ಹೆಚ್ಚಿಸುವ ಸಾಧ್ಯತೆ ಇದ್ದು, ಈ ಕುರಿತಂತೆ ಆಯೋಗವು ಸೋಮವಾರ (ಮೇ 14) ಆದೇಶ ಪ್ರಕಟಿಸಲಿದೆ.
- ಬೆಂಗಳೂರು : ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ 72.36ರಷ್ಟು ಮತದಾನವಾಗಿದೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತ್ತು ಕೊಪ್ಪಳ ಜಿಲ್ಲೆ ಕುಷ್ಠಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ. ಈ ಬಾರಿ ಹೊಸಕೋಟೆ (ಶೇ 89.97) ಕ್ಷೇತ್ರದಲ್ಲಿ ಅತಿ ಹೆಚ್ಚು, ದಾಸರಹಳ್ಳಿಯಲ್ಲಿ (ಶೇ 48.03) ಅತಿ ಕಡಿಮೆ ಮತದಾನ ಆಗಿದೆ. 1978ರ ಚುನಾವಣೆಯಲ್ಲಿ 71.90ರಷ್ಟು ಮತದಾನ ನಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಆ ನಂತರ 2013ರಲ್ಲಿ ಶೇ 71.45ರಷ್ಟು ಮತದಾನ ಆಗಿತ್ತು.
- ಕದನ ಹೆಲಿಕಾಪ್ಟರ್ಗಳು, ಟ್ಯಾಂಕ್ಗಳು ಮತ್ತು ಕಾಲಾಳು ಸೈನಿಕರನ್ನು ಬಳಸಿಕೊಂಡು ವೈರಿ ಪಡೆಯ ಮೇಲೆ ದಾಳಿ ನಡೆಸುವ ‘ಏರ್ ಕ್ಯಾವಲ್ರಿ’ ಯುದ್ಧತಂತ್ರವನ್ನು ಆಧರಿಸಿ ಭಾರತೀಯ ಸೇನೆಯು ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಈಚೆಗೆ ಅಣಕು ಕಾರ್ಯಾಚರಣೆ ನಡೆಸಿದೆ. 1970ರ ದಶಕದಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯರ ಗೆರಿಲ್ಲಾ ತಂತ್ರಕ್ಕೆ ಪ್ರತಿಯಾಗಿ ಅಮೆರಿಕದ ಸೇನೆ ‘ಏರ್ ಕ್ಯಾವಲ್ರಿ’ಯನ್ನು ಬಳಸಿತ್ತು. ಆ ತಂತ್ರವನ್ನೇ ತುಸು ಮಾರ್ಪಡಿಸಿ ತನ್ನ ಕದನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಸೇನೆ ಮುಂದಾಗಿದೆ
- ನವದೆಹಲಿ : ಕೇಂದ್ರ ಸರ್ಕಾರದ ಬಡ್ಡಿ ಸಹಾಯಧನ ಯೋಜನೆ ಅಡಿಯಲ್ಲಿ ಎಷ್ಟು ರೈತರು ಬೆಳೆ ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ. ರೈತರಿಗೆ ಒಂದು ವರ್ಷದ ಅವಧಿಗೆ ₹3 ಲಕ್ಷದವರೆಗೆ ಶೇ 4ರ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡುವ ಯೋಜನೆಗೆ ಕೇಂದ್ರ ಸಂಪುಟ ಕಳೆದ ಜೂನ್ನಲ್ಲಿ ಅನುಮೋದನೆ ನೀಡಿತ್ತು. ಆರ್ಬಿಐ ಮತ್ತು ನಬಾರ್ಡ್ ಈ ಯೋಜನೆಯ ಅನುಷ್ಠಾನ ಸಂಸ್ಥೆಗಳು. ಬಡ್ಡಿ ಸಹಾಯಧನದ ಮೊತ್ತವನ್ನು ಸರ್ಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೀಡಲಾಗುತ್ತದೆ.
- ನವದೆಹಲಿ : ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಎಸ್ಸಿ, ಎಸ್ಟಿ ಕಾಯ್ದೆ) ಅಡಿಯಲ್ಲಿ ದೂರು ದಾಖಲಾದರೆ ಆರೋಪಿಯನ್ನು ತಕ್ಷಣವೇ ಬಂಧಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸುವುದಕ್ಕಾಗಿ ಸುಗ್ರೀವಾಜ್ಞೆ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಅಷ್ಟೇ ಅಲ್ಲದೆ, ಈ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಯೋಚಿಸಲಾಗುತ್ತಿದೆ. ಕಾಯ್ದೆಯನ್ನು ಈ ಪರಿಚ್ಛೇದಕ್ಕೆ ಸೇರಿಸಿದರೆ ಅದನ್ನು ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಅವಕಾಶ ಇರುವುದಿಲ್ಲ. ಎಸ್ಸಿ, ಎಸ್ಟಿ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ಮಾರ್ಚ್ನಲ್ಲಿ ನೀಡಿದ್ದ ತೀರ್ಪು ಈ ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ, ಉತ್ತರ ಭಾರತದಾದ್ಯಂತ ನಡೆದ ಪ್ರತಿಭಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.
- ನವದೆಹಲಿ : ಪರಿಶಿಷ್ಟ ಜಾತಿ (ಎಸ್ಸಿ) ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಈ ಯೋಜನೆಯ ಫಲಾನುಭವಿಗಳಾಗಿರುವ ಕನಿಷ್ಠ ಶೇ 50ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಲೇಬೇಕು. ಇಲ್ಲದಿದ್ದರೆ ಅಂತಹ ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ ನಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಶಾಲೆಗಳ ನಿಯಮಾವಳಿಗಳನ್ನು ಪರಿಷ್ಕರಿಸಿದೆ.
- ನವದೆಹಲಿ : ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಚೀನಾ ಗಡಿಯಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಒಟ್ಟು 15 ಹೊಸ ಬಟಾಲಿಯನ್ ಸ್ಥಾಪಿಸಲು ಒಪ್ಪಿಗೆ ನೀಡಿದೆ. ಸಿಬ್ಬಂದಿ ನೇಮಕಾತಿ ಮತ್ತು ಮೂಲಸೌಕರ್ಯ ಕಲ್ಪಿಸುವ ಮೂಲಕ ಚೀನಾ ಗಡಿಯಲ್ಲಿರುವ ಇಂಡೋ–ಟಿಬೇಟಿಯನ್ ಬಾರ್ಡರ್ ಪೊಲಿಸ್(ಐಟಿಬಿಪಿ) ಪಡೆಯನ್ನು ಬಲಪಡಿಸಲು ನಿರ್ಧರಿಸಿದೆ. ಕಳೆದ ತಿಂಗಳು ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಅರುಣಾಚಲ ಪ್ರದೇಶ ಮತ್ತು ಲಡಾಖ್ ವಲಯದಲ್ಲಿ 9 ಸಾವಿರ ಸಿಬ್ಬಂದಿಯನ್ನು ಹೊಂದಿರುವ 9 ಹೊಸ ಐಟಿಬಿಪಿ ಬಟಾಲಿಯನ್ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಉಳಿದ ಆರು ಬಟಾಲಿಯನ್ಗಳು ಗಡಿ ಭದ್ರತಾ ಪಡೆಗೆ ಸೇರಲಿವೆ.
- ಲಂಡನ್ : ಬ್ರಿಟನ್ನ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ ಹಿಂದುಜಾ ಸಹೋದರರು ಎರಡನೇ ಸ್ಥಾನ ಗಳಿಸಿದ್ದಾರೆ. ರಾಸಾಯನಿಕ ವ್ಯವಹಾರಗಳ ಉದ್ಯಮಿ ಜಿಮ್ ರ್ಯಾಟ್ಕ್ಲಿಫ್ ಅವರು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಲಂಡನ್ನಲ್ಲಿ ನೆಲೆಸಿರುವ ಶ್ರೀಚಂದ್ ಮತ್ತು ಗೋಪಿಚಂದ್ ಹಿಂದುಜಾ ಸಹೋದರರು ₹1.87 ಲಕ್ಷ ಕೋಟಿ ಆಸ್ತಿ ಹೊಂದಿದ್ದು, ರ್ಯಾಟ್ಕ್ಲಿಫ್ ಅವರು ₹1.91 ಲಕ್ಷ ಕೋಟಿ ಆಸ್ತಿ ಹೊಂದಿದ್ದಾರೆ ಎಂದು ‘ಸಂಡೇಟೈಮ್ಸ್ರಿಚ್ ಲಿಸ್ಟ್’ನಲ್ಲಿ ತಿಳಿಸಲಾಗಿದೆ.ಬ್ರಿಟನ್ನ 1ಸಾವಿರ ಮಂದಿ ಶ್ರೀಮಂತರ ಪಟ್ಟಿಯಲ್ಲಿ 47 ಮಂದಿ ಭಾರತೀಯ ಮೂಲದವರು.
- ಬೀಜಿಂಗ್ : ಚೀನಾದ ಮೊದಲ ಸಂಪೂರ್ಣ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ವಾಹಕ ನೌಕೆಯು ಸಮುದ್ರ ಮಾರ್ಗದಲ್ಲಿ ತನ್ನ ಪರೀಕ್ಷಾರ್ಥ ಸಂಚಾರವನ್ನು ಭಾನುವಾರ ಆರಂಭಿಸಿತು. ವಿವಾದಿತ ಸಮುದ್ರ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸುವುದು ಹಾಗೂ ಚೀನಾದ ಸೇನಾ ಶಕ್ತಿಯನ್ನು ಬಲಗೊಳಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ ನೌಕೆಯು ಸಮುದ್ರಕ್ಕೆ ಇಳಿದಿದೆ. ಇದು ಮೊದಲ ಸ್ವದೇಶಿ ನಿರ್ಮಿತ ಹಾಗೂ ದೇಶದ ಎರಡನೇ ವಿಮಾನವಾಹಕ ನೌಕೆ ಎನಿಸಿದ್ದು, 2020ರಲ್ಲಿ ಸೇನೆಗೆ ಸೇರ್ಪಡೆಯಾಗಲಿದೆ.
- ಹುಬ್ಬಳ್ಳಿ : ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಪೈಸ್ಜೆಟ್, ಉಡಾನ್ ಯೋಜನೆಯಡಿ ಸೋಮವಾರದಿಂದ (ಮೇ 14) ಬೆಂಗಳೂರು, ಮುಂಬೈ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಗೆ ಹುಬ್ಬಳ್ಳಿಯಿಂದ ನೇರ ವಿಮಾನಯಾನ ಸೇವೆ ಒದಗಿಸಲಿದೆ.
- ಮಂಡ್ಯ : ಅಂತರರಾಷ್ಟ್ರೀಯ ಮಟ್ಟದ ವಾಲಿಬಾಲ್ ಕೋಚ್, ಮಂಡ್ಯದ ಹೊಸಹಳ್ಳಿ ಬಡಾವಣೆ ನಿವಾಸಿ ಎಂ.ಎಸ್.ಮಾದೇಗೌಡ (68) ಅವರು ಭಾನುವಾರ ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಗಂಡುಮಕ್ಕಳು ಇದ್ದಾರೆ. ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕ್ರೀಡಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಗಳಲ್ಲಿ ಆಡಿದ್ದ ಅವರು, ಹಲವು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
- ಮ್ಯಾಡ್ರಿಡ್ : ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಕ್ವಿಟೋವಾ 7–6, 4–6, 6–3ರಲ್ಲಿ ನೆದರ್ಲೆಂಡ್ಸ್ನ ಕಿಕಿ ಬರ್ಟೆನ್ಸ್ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ ಎರಡು ಗಂಟೆ 51 ನಿಮಿಷ ನಡೆಯಿತು.ಇದರೊಂದಿಗೆ ಜೆಕ್ ಗಣರಾಜ್ಯದ ಆಟಗಾರ್ತಿ, ಟೂರ್ನಿಯಲ್ಲಿ ಮೂರನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. 2011 ಮತ್ತು 2015ರಲ್ಲೂ ಅವರು ಚಾಂಪಿಯನ್ ಆಗಿದ್ದರು. ಕ್ವಿಟೋವಾ ಈ ವರ್ಷ ಗೆದ್ದ ನಾಲ್ಕನೇ ಟ್ರೋಫಿ ಇದು. ಸೇಂಟ್ ಪೀಟರ್ಸ್ ಬರ್ಗ್, ದೋಹಾ ಮತ್ತು ಪರುಗ್ವೆಯಲ್ಲಿ ನಡೆದಿದ್ದ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿದ್ದರು.
Sunday, May 13, 2018
ಸೋಮವಾರ ಮೇ 14-2018
Subscribe to:
Post Comments (Atom)
ಬುಧವಾರ ಮೇ 16-2018
ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...
-
ಬೆಂಗಳೂರು : ‘ ಮಹದಾಯಿ ಜಲ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಬಿಜೆಪಿ ಬದ್ಧ ’ ಎಂದು ಗದಗದಲ್ಲಿ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮ...
-
ಇಂದೋರ್ : ಅತ್ಯಾಚಾರಗಳ ಬಗ್ಗೆ ಇರುವಷ್ಟೇ ಆಕ್ರೋಶ , ಆ ಪ್ರಕರಣಗಳ ವಿಳಂಬಗತಿಯ ವಿಚಾರಣೆ , ವರ್ಷಗಳ ನಂತರ ತೀರ್ಪು ಪ್ರಕಟವಾಗುವ ಕುರಿತೂ ಇದೆ . ಆ...
-
ಬೆಂಗಳೂರು : ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ 71.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು , ಈ ಬಾರಿಯೂ ಮೇಲುಗೈ ಸಾಧಿಸಿರುವ ಗ್ರಾಮೀಣ ವಿ...
No comments:
Post a Comment